Wednesday, September 28, 2011

ಕಲಸುಮೇಲೋಗರಕ್ಕೆ ಬಿಸಿ ಬಿಸಿ ತುಪ್ಪ

    
    ಮನದಾಳದ ಮಾತು ಅರ್ಥೈಸಲು ಏಕಿಷ್ಟು ಕಷ್ಟ? ನನಗೆ ನಾನೇ ಒಂದು ಪ್ರಶ್ನಾರ್ಥಕ ಚಿನ್ಹೆ..

 ಯಾವುದೋ ಒಂದು ತಿಳಿಯದ ಹೆಬ್ಬಯಕೆ.. ತಿಳಿದರೆ ಏನನ್ನಾದರೂ ಮಾಡಿ ಸಾಧಿಸಬಹುದಿತ್ತು..

    ಎಷ್ಟೋ ಕೆಲಸಗಳಿವೆ, ಮಾಡಲು ಮನಸ್ಸಿಲ್ಲ...

 ಏನೋ ಕಾತುರತೆ.. ಆ ಕಾತುರತೆಗೆ ಅರ್ಥವಿಲ್ಲ.. 

    ಯಾವಾಗಲೂ ಕಾಡುವ ಶಂಕೆ.. ಸುಖ ಜೀವನದ ನಿಶ್ಚಿತತೆ ಮನದಾಳದಿಂದ ಉಕ್ಕುತ್ತಿದ್ದರೂ, ಅದಕ್ಕೆ ದೃಷ್ಟಿ ಬೊಟ್ಟಿನಂತೆ ಅನಿಶ್ಚಿತತೆಯ ಕಾಟ...

 ಉತ್ಸಾಹದಲ್ಲಿ ಇಂಗಿ ಆವಿಯಾಗುತ್ತಿರುವೇನೋ ಎಂಬ ಭಾವ. ಆದರೂ ಮನಸ್ಸು ಗಟ್ಟಿಯಾಗಿ ಬೇರೂರಿದೆ.. ಬಿಟ್ಟರೆ ಚಿಗರೆಯಂತೆ ಮಿಂಚಿ ಮಾಯವಾಗುವೆ.. ಆದರೆ ನನಗೆ ನಾನೇ ದಿಗ್ಬಂಧನ ಹಾಕಿಕೊಂಡಿರುವೆ. ಅಂತರಿಕ್ಷ ನೌಕೆಯ ಉಡಾವಣೆಗೆ ನಿಗದಿತ ಮುಹೂರ್ತ ಇರುವಹಾಗೆ, ನನ್ನ ಉಡಾವಣೆಯ ಮುಹೂರ್ತಕ್ಕೆ ಕಾದಿರುವೆ.. ಬದುಕೆಂಬ ಅಂತರಿಕ್ಷದ ಅಂಧಕಾರದಲ್ಲಿ ಅದಾವ ಅದ್ಭುತ ಲೋಕವನ್ನು ಕಂಡುಹಿಡಿಯುವೆ ತಿಳಿಯೆ. 

    ಬುದ್ಧಿ ಕಲಸುಮೇಲೋಗರವಾಗಿದೆ. ಸಂತಸ, ದುಃಖ, ಕಾತರತೆ, ಕುತೂಹಲ, ಅನುಮಾನ, ನಂಬಿಕೆ, ಉತ್ಸಾಹ, ಉದಾಸೀನತೆ, ಭಯ, ಪ್ರೀತಿ, ಬಯಕೆ, ನಿಸ್ಪೃಹತೆ, ದೈನ್ಯತೆ, ಅಧೀನತೆ.. ಎಲ್ಲ ಭಾವನೆಗಳು ಒಮ್ಮೆಲೇ ದಾಳಿಯಿಡುತ್ತಿವೆ.. 

 ಆದರೆ ಒಂದು ಮಾತು ನಿಜ.. ಕಡಗೋಲು ಹಾಕಿ ಕಲಕುವಂತಾಗಿರುವ ಬುದ್ಧಿ ತನ್ನ ಸ್ಥಿಮಿತ ಕಂಡುಕೊಂಡಾಗ 'ಅನುಭವ' ಎಂಬ ಗಾಢ ಬೆಣ್ಣೆ ಮೇಲೆ ತೇಲುತ್ತದೆ..... ಅನುಭವದ ಬೆಣ್ಣೆಯು, ಪ್ರೀತಿಪಾತ್ರರ 'ಸಹಕಾರ'ವೆಂಬ ಬಾಣಲೆಯಲ್ಲಿಟ್ಟು, 'ಸ್ಫೂರ್ತಿ'ಎಂಬ ಒಲೆಯಮೇಲಿರಿಸಿ, 'ದುಡಿಮೆ' ಎಂಬ ಬೆಂಕಿಯಲ್ಲಿ ಕಾಯಿಸಿದರೆ... ಆಹಾ!!! 'ಸಾಧನೆಯ' ತುಪ್ಪವನ್ನು ಮೆಂದು ದಪ್ಪವಾಗುವುದು ಖಚಿತ!!! 

    ಸಧ್ಯಕ್ಕೆ ಮನಸ್ಸು ನನ್ನ ಬುದ್ಧಿಗೆ ಹೇಳುವ ಬುದ್ಧಿಮಾತು ಇದೊಂದೇ  - " ಶಾಂತಿ... ಶಾಂತಿ... ಶಾಂತಿ.."

Wednesday, August 24, 2011

ಹಸಿವು ಕ್ರಾಂತಿ


ಹಸಿವಾಗಿದೆ ಉಸಿರೇರಿದೆ
ಕಾಡಿದೆ ಭಾವ ಬಡತನ,
ಅನ್ಯಾಯದಿ ಮನಗೆಟ್ಟಿದೆ
ಬೇಕಿದೀ ದುರ್ಗತಿ ದಮನ.

ಎಚ್ಚೆದ್ದಿದೆ ಭುಗಿಲೆದ್ದಿದೆ
ಮೈಕೊಡವಿದೆ ಜನಮನ,
ಸಮಚಿತ್ತದೆ ಮುನ್ನುಗ್ಗಿದೆ
ದೇಶ ದೇಶಾಂತರದ ಜನ.

ಭ್ರಷ್ಟಾಳ್ವಿಕೆ ಮಂಪರಿನೆವೆ
ಎಚ್ಚರಿಸಿದೆ ಕ್ರಂದನ,
ಬೆದರಿದಿಂದೆ ರಾಜಕಾರಣೆದೆ
ಕಂಡು ಪ್ರಜೆಗಳೊಮ್ಮನ.

ಬದುಕಿರಲಿ ಎಂದೆಡುವದೆ
ಒಗ್ಗಟ್ಟಿನ ಜನಬಲ,
ನಡೆದಿರಲಿ ತಡೆಯಿರದೆ
ಈ ಸಾತ್ವಿಕ ಚಿಂತನ.