Wednesday, August 24, 2011

ಹಸಿವು ಕ್ರಾಂತಿ


ಹಸಿವಾಗಿದೆ ಉಸಿರೇರಿದೆ
ಕಾಡಿದೆ ಭಾವ ಬಡತನ,
ಅನ್ಯಾಯದಿ ಮನಗೆಟ್ಟಿದೆ
ಬೇಕಿದೀ ದುರ್ಗತಿ ದಮನ.

ಎಚ್ಚೆದ್ದಿದೆ ಭುಗಿಲೆದ್ದಿದೆ
ಮೈಕೊಡವಿದೆ ಜನಮನ,
ಸಮಚಿತ್ತದೆ ಮುನ್ನುಗ್ಗಿದೆ
ದೇಶ ದೇಶಾಂತರದ ಜನ.

ಭ್ರಷ್ಟಾಳ್ವಿಕೆ ಮಂಪರಿನೆವೆ
ಎಚ್ಚರಿಸಿದೆ ಕ್ರಂದನ,
ಬೆದರಿದಿಂದೆ ರಾಜಕಾರಣೆದೆ
ಕಂಡು ಪ್ರಜೆಗಳೊಮ್ಮನ.

ಬದುಕಿರಲಿ ಎಂದೆಡುವದೆ
ಒಗ್ಗಟ್ಟಿನ ಜನಬಲ,
ನಡೆದಿರಲಿ ತಡೆಯಿರದೆ
ಈ ಸಾತ್ವಿಕ ಚಿಂತನ.

Wednesday, June 16, 2010

CAFE` ಸಂಜೆ

" India needs 30 runs from 35 balls... This is an easy win if India doesn't loose wickets...."
LCD TV ಇಂದ ಕೇಳಿಬರುತ್ತಿತ್ತು ರವಿಶಾಸ್ರ್ತಿಯ ಕಂಚಿನ ಕಂಠದ ಕಾಮೆಂಟ್ರಿ. ಅಲ್ಲೇ ಪಕ್ಕದಲ್ಲಿ ಸುಸಜ್ಜಿತ ಸೋಫಾದಲ್ಲಿ ನಾನು ನನ್ನ ಬಳಗದೊಂದಿಗೆ relax ಮಾಡುತ್ತಿದ್ದೆ. ನಮ್ಮ ಮುಂದೆ Chocolate ice-cream, Cheese cake, Ice coffee, ice tea, cappuccino, espresso ಮುಂತಾದುವುಗಳ ಮಹಾಪೂರವೇ ನೆರೆದಿತ್ತು. ಆಗತಾನೆ ಊಟ ಮುಗಿಸಿದ್ದ ನಾವು ಇವನ್ನು ತಿನ್ನಲಾರದೆ ತಿನ್ನುತಿದ್ದೆವು. ನಾನು 'Cappuccino' ಎಂಬೋ ಬಿಸಿ ಕಾಫಿಯನ್ನು ಹೀರುತ್ತಾ ನನ್ನ ಬಳಗದವರ ಮಾತನ್ನು ಕೇಳುತ್ತಿದ್ದೆ. ಹಾಡಿದ್ದೇ ಹಾಡಿದ ಕಿಸಬಾಯಿ ದಾಸನ ಹಾಡಿನಂತಿದ್ದ ಅವರ ಮಾತು ಬೇಸರವೆನಿಸಿತು. ಅಂತರ್ಮುಖಿಯಾಗಿರುವುದೇ ಲೇಸೆನಿಸಿತು. ಆಚೆ ಕಿಟಕಿಯ ಗಾಜಿನ ಮೇಲೆ ಮಳೆ ನೀರು ಹರಿಯುತ್ತಿತ್ತು, ಒಳಗೆ AC ಚಳಿ ಗಾಳಿ ಮೈಗೆ ಹಿಂಸೆಯಾಗಿತ್ತು. ಗೋಡೆಯ ಮೇಲಿದ್ದ ಗಡಿಯಾರಣ್ಣನ ಎರಡೂ ಮೀಸೆ ಕೋಪದಿಂದ ಸೊಟ್ಟಗಾಗಿರುವಂತೆ ಕಂಡಿತು. ಅವನ ಸಣ್ಣ ಮೀಸೆ ಕೆಳಕ್ಕೆ ಸೊಟ್ಟಗೆ ಬಾಗಿ, ನಾವು ಬಂದು ಎರಡು ಗಂಟೆಗಳಾಯಿತು ಎಂದು ಸಾರುತಿತ್ತು. Relax ಮಾಡಲು ಬಂದ ನನಿಗೆ ಏನೋ ಕಸಿವಿಸಿ.

ಅಷ್ಟರಲ್ಲಿ ಮಿತ್ರನಂತೆ ಬಂದ 'ಮಿತ್ರ' ತನ್ನ ಕಿರಣಗಳಿಂದ ಮೋಡಗಳನ್ನು ಚದುರಿ ಬೆಳಕಿನ ಉಡುಗೊರೆ ನೀಡಿದ. ಉದಾಸೀನದಿಂದ ಕೂತಿದ್ದ ನನ್ನ ಗೆಳೆಯರು, ಸಮಯದ ಅರಿವಾಗಿ ಆಫೀಸಿಗೆ ಹೊರಡಲು ಅಣಿಯಾದರು. ನಮ್ಮ Boss ಅದೆಷ್ಟೋ ಮೊತ್ತದ ಬಿಲ್ಲನ್ನು ಕಟ್ಟಿ ಆಚೆ ಬಂದರು.

ಆಚೆ ಎಲ್ಲವೂ ಹೊಚ್ಚ ಹೊಸದಂತೆ ಕಾಣುತ್ತಿತ್ತು. ಎಲವೂ ಸ್ವಚ್ಛ, ಸ್ಪಷ್ಟ. ಆಗ ಗೋಚರಿಸಿದ್ದು, ಮಳೆಯಲ್ಲಿ ಪೂರ್ತಿಯಾಗಿ ತೋಯ್ದ ಒಬ್ಬ ಕಾಲಿಲ್ಲದ ಮುದಿ ಭಿಕ್ಷುಕ. ತನ್ನ ಮುರಿದ ಮರದ ಹಾಳೆಯ ಗಾಲಿಯಮೇಲೆ ಕೂತು ನಮ್ಮೆಡೆಗೆ ಬರುತ್ತಿದ್ದ. ಹಸಿವೆಯಿಂದ ಉಸಿರಾಡಲೂ ಆತ ಅಶಕ್ತ. ದೃಶ್ಯ ಕಣ್ಣಿಗೆ ಕಟ್ಟಿತ್ತು... ಆಚೆ ಸ್ನೇಹಿತರು ಕಾರೊಳಗೆ ಕೂರಲು ಕರೆಯುತ್ತಿದ್ದರು...

ಕಾರು ಆಫೀಸಿನತ್ತ ಧಾವಿಸಿತ್ತು. ಸ್ನೇಹಿತರ ಮಾತು ಮುಂದುವರೆದಿತ್ತು... ಕಿಟಕಿಯಿಂದಾಚೆ ಸುಂದರ ನವ ವಿನ್ಯಾಸದ ಕಟ್ಟಡಗಳು ಏನನ್ನೋ ಸಾಧಿಸಿ ಗೆದ್ದವರಂತೆ ತಲೆಯೆತ್ತಿ ಸಾಲಾಗಿ ನಿಂತಿದ್ದವು. ಅವನ್ನು ನೋಡಿ ಏನೋ ಕಳಕೊಂಡ ಭಾವ. ಕಟ್ಟಡಗಳ ಬುನಾದಿ ಟೊಳ್ಳು ಎಂದು ಅನಿಸುತ್ತಿತ್ತು.

ಹೊಟ್ಟೆಯಲ್ಲಿ ಕುಕ್ಕುತ್ತಿತ್ತು ಮಧ್ಯಾನ್ನದ ಊಟ, ಕಣ್ಣಿಗೆ ಕಟ್ಟಿತ್ತು ಆ ಭಿಕ್ಷುಕನ ನೋಟ, ಮನದಲ್ಲಿ ಏನೋ ಸಂಕಟ. ಕೊನೆಗೆ ಕಿಸೆಯಿಂದ ಪರ್ಸನ್ನು ತೆಗೆದು ನೋಡಿದೆ.... ಅದರಲ್ಲಿ ಒಂದು ಬಿಡಿಗಾಸೂ ಇರಲ್ಲಿಲ್ಲ........ ಮನಸ್ಸಿಗೆ ಏನೋ ಹುಸಿಯಾದ ಸಮಾಧಾನವಾಗಿತ್ತು!!!!!....

Saturday, February 27, 2010

ಭ್ರಾಂತಿ



ಭ್ರಾಂತು ಬಂದಿದೆ ನನಗೆ
ಈ ಭ್ರಮೆಯ ಬಗ್ಗೆ,
ತಿಳಿಯದಾಗಿದೆ ಎನಗೆ
ಈ ಭ್ರಾಂತಿ ಬಗ್ಗೆ.

ಸೋಜಿಗವು ನನಗೆ
ಭೂತಕಾಲದ ಬಗ್ಗೆ,
ನಿನ್ನೆ ಎಂಬ ಭೂತ
ಇಂದು ಕಾಡಿದಬಗ್ಗೆ.

ಬೇಸರವು ನನಗೆ
ಈ ಭ್ರಾಂತಿ ಬಗ್ಗೆ,
ನಾಳೆಯಾ ಭವ-ವಿಷಯ
ಸಿಗದೀಗಿಂದ ಈಗ್ಗೆ.

ಅನುಮಾನ ನನಗೆ
ವರ್ತಮಾನದ ಬಗ್ಗೆ,
ಇಂದು ಎಂಬುದು ನಿಜವೇ?
ಹೇಳಿದರಬಗ್ಗೆ.

ಸತ್ಯವೇ ಉದ್ಭವಿಸು
ಮನದಲ್ಲಿ ಈಗ್ಗೆ,
ಸಾಕ್ಷಾತ್ಕಾರ ಸ್ಫೋಟಿಸು
ಒಡೆದು ಈ ಭ್ರಾಂತಿ ಬುಗ್ಗೆ.

Friday, January 29, 2010

ಹರಿದ ಹತ್ತು ರೂಪಾಯಿ


ಉಸಿರಾಡುತಿದ್ದೆ ಹಾಯಾಗಿ,
ಜೀವಂತ ಮರವಾಗಿ,
ಬದುಕಿದ್ದೆ ನಾ ಪರರಿಗಾಗಿ,
ಪರರು ಕಡಿದರು ನನ್ನ ಅವರವರಿಗಾಗಿ...

ತೀಡಿದರು ನನ್ನ ಹಾಳೆಯಾಗಿ,
ಕತ್ತರಿಸಲಂಕರಿಸಿ ಬಣ್ಣಬಣ್ಣವಾಗಿ,
ಟಂಕ ಠಸ್ಸೆಯ ಏಟು ತಿಂದಾಗಿ,
ಹೊರ ಬಂದೆ ನಾ ಹತ್ತು ರೂಪಾಯಾಗಿ...

ಸಾರಿದರು ನನ್ನದಲ್ಲದ ಮೌಲ್ಯವ ಪರಿಪರಿಯಾಗಿ,
ಹಾರಿದೆ ನಾನು ಕೈಯ್ಯಿಂದ ಕೈ ಬದಲಾಗಿ,
ಬಡವರಿಗೆ ಬೇಕಾಗಿ, ಬಲ್ಲಿದಗೆ ಬೇಕಾರಾಗಿ,
ಓಡಿದೆ ನಾ ಹತ್ತು ರೂಪಾಯಾಗಿ...

ಕೈಗಳಲಿ ಒದ್ದಾಡಿ,
ಒದ್ದೆಯಿಂದೆದ್ದೊಣಗಿ
ಮತ್ತೊದ್ದೆಯಾಗಿ
ಮುಪ್ಪೇರಿ ಮುದಿಯಾಗಿ ಬಿದ್ದೆನಾ ತುಂಡಾಗಿ..

ಈಗ ಬಿದ್ದಿರುವೆ ತಿರಸ್ಕೃತನಾಗಿ,
ಸಾರಿದ್ದರು ನನ್ನದಲ್ಲದ ಮೌಲ್ಯವ ಪರಿಪರಿಯಾಗಿ,
ಹಿಂದೆ ಉಸಿರಾಡುತಿದ್ದೆ ಹಾಯಾಗಿ,
ನಾ ಜೀವಂತ ಮರವಾಗಿ!!!!

Tuesday, December 15, 2009

ಸೂರ್ಯನ ಕುಂಚ



ತಾರಸಿಗೆ ಹೋಗುವ ಮೆಟ್ಟಿಲ ಬಳಿ ಇದ್ದ ಕಿಟಕಿಯ ಗಾಜು ತಿಳಿಗೆಂಪಾಗಿತ್ತು. ತಾರಸಿಗೆ ಹೋಗುವ ಅವಸರದಲ್ಲಿ ಕೈಯ್ಯಲ್ಲಿದ ಲೋಟದಿಂದ ಕಾಫಿ ಚೆಲ್ಲಿತ್ತು. ಹಲುಬಿ ಬಟ್ಟೆ ತಂದು ಒರೆಸಿದೆ. ಬಟ್ಟೆ ಅಲ್ಲೇ ಬಿಟ್ಟು ತಾರಸಿಗೆ ಹೋದೆ.
ಸೂರ್ಯನು ರಶ್ಮಿ ಎಂಬ ತನ್ನ ಕುಂಚದಿಂದ ಎಲ್ಲದಕ್ಕೂ ತಿಳಿಗೆಂಪು ಬಣ್ಣ ಮೆತ್ತಿದ್ದ. ಆಹಾ ಎಷ್ಟು ಸುಂದರ ದೃಶ್ಯ. ಪ್ರಕೃತಿಯು ನಿತ್ಯವೂ ಶೃಂಗಾರಮಯ. ಕ್ಷಣ ಕ್ಷಣಕ್ಕೂ ತನ್ನ ಬಣ್ಣವನ್ನು, ಬಣ್ಣದೊಂದಿಗೆ ಭಾವವನ್ನು, ಭಾವದೊಂದಿಗೆ ಕಾರ್ಯವನ್ನು ಬದಲಾಯಿಸುತ್ತದೆ,
ನಿಲ್ಲದೆ ಮುಂದುವರೆಸುತ್ತಿರುತ್ತದೆ. ಇದು ಅದರ ಕೊನೆಯಿಲ್ಲದ ಸಾವಿಲ್ಲದ ಪ್ರಕ್ರಿಯೆ. ಯೋಚಿಸಿ ಇದೊಂದು ಅದ್ಭುತವಲ್ಲವೇ?
ನಾನೂ ಈ ಪ್ರಕೃತಿಯ ಒಂದು ಭಾಗ. ಹೀಗಿರುವಾಗ ಯಾಕೆ ನಾನು ಪ್ರಕೃತಿಯ ಭಾಗವಲ್ಲವೇನೋ ಎಂಬಂತೆ, ಅದಕ್ಕೆ ತದ್ವಿರುದ್ಧವಾಗಿ, ಯಾಂತ್ರಿಕವಾಗಿ ಬದುಕುತ್ತಿದ್ದೇನೆ? ಹಾಗೆಂದು ನನ್ನ ಕರ್ತವ್ಯವನ್ನು ಬಿಟ್ಟು ದಿನವೂ ಬೇರೆ ಕೆಲಸಕ್ಕೆ ಕೈ ಹಾಕಬೇಕೆಂದಲ್ಲ. ಬದುಕನ್ನು ದಿನವೂ ಹೊಸ ಹೊಸ ದೃಷ್ಟಿಕೋನದಲ್ಲಿ ನೋಡಿದರೆ, ಜಗತ್ತು ದಿನವೂ ಹೊಸದಾಗಿ ಕಾಣುತ್ತದೆ. ಬೇರೆ ಬೇರೆ ರೀತಿಯಲ್ಲಿ ಯೋಚಿಸಿದಾಗ, ನಮ್ಮ ನಿತ್ಯದ ಯಾಂತ್ರಿಕತೆಯಲ್ಲೇ ಹೊಸ ಸಂದರ್ಭಗಳನ್ನು ಹುಟ್ಟುಹಾಕಿ, ಅದರಲ್ಲಿ ಬಾಳಿ, ಹೊಸ ಅನುಭವಗಳನ್ನು ಪಡೆಯಬಹುದು.
ನಾಳೆ ಯಾವ ಅನುಭವ, ಯಾವ ಭಾವ, ನನ್ನಮೇಲೆ ದಾಳಿಯಿಡುತ್ತದೆಯೋತಿಳಿಯೆ. ಆದರೆ ನಾಳೆಗೆ ಕಾತರದಿಂದ ಕಾಯುತಿದ್ದೇನೆ. ಅದರ ವಿವಿಧತೆಯನ್ನ ಅನುಭವಿಸುವುದಕ್ಕೆ ಮನಸ್ಸು, ಬುದ್ಧಿ ಸಿದ್ಧವಿದೆ.
ಸೂರ್ಯನು ತನ್ನ ಕುಂಚವನ್ನು ಮೋಡದ ನೀರಿನಲ್ಲಿ ಅದ್ದಿದ್ದಾನೇನೋ, ಆಕಾಶ ಗಾಢ ನೀಲಿ ಬಣ್ಣಕ್ಕೆ ತಿರುಗಿದೆ.
ಸೂರ್ಯ ದೇವನ ಈ ಪಾಠಕ್ಕೆ ಗುರು ಕಾಣಿಕೆ ನೀಡಬೇಕೆಂದಿದ್ದೇನೆ. ನನ್ನ ಯಾವುದೇ ಕೆಲಸದಲ್ಲಿ ಸ್ವಲ್ಪವಾದರೂ ತಪ್ಪು ಇದ್ದೆ ಇರುತ್ತದೆ. ಅದು ನನ್ನ ದೃಷ್ಟಿಕೋನದ ಪ್ರಭಾವ. ತಪ್ಪು ಮಾಡದೇ ಕೆಲಸ ಮಾಡುವುದು ಬರಿ ದೇವರಿಂದ ಸಾಧ್ಯ ಎಂದು ನಂಬಿದ್ದೆ. ಈಗಿನಿಂದ ನನ್ನ ದೃಷ್ಟಿಕೋನ ಸ್ವಲ್ಪ ಬದಲಾಯಿಸುವ ಮನಸ್ಸು ಮಾಡಿದ್ದೇನೆ. ತಪ್ಪು ಮಾಡದೆ ಕೆಲಸ ಮಾಡಲು ಸಾಧ್ಯ ಎಂದು ನನಗೆ ನಾನು ನಂಬಿಸಿದ್ದೇನೆ. ನಾಳೆಯ ದಿನ ಹೇಗಿರುತ್ತೆ ನೋಡಬೇಕು.
ನನ್ನ ಕಲ್ಪನಾ ಲೋಕದಿಂದ ಆಚೆ ಬಂದಾಗ ಸೂರ್ಯನು ಆಕಾಶಕ್ಕೆ ಕಪ್ಪು ಬಣ್ಣ ಬಳಿದು ವಿದಾಯ ಹೇಳಿದ್ದ. ಕೆಳಗಿಂದ ಅಮ್ಮ ತರಕಾರಿ ಹೆಚ್ಚಲು ಕೂಗುತಿದ್ದಾಳೆ. ಈಗ ತಪ್ಪು ಮಾಡಿದರೆ ಕೈ ಬೆರಳೇ ದಂಡವಾಗಿ ಕೊಡಬೇಕಾದೀತು!!!!

Sunday, October 18, 2009

ಪ್ರಯಾಣ

ನವರಾತ್ರಿಯ ಹಬ್ಬದ ಸಂಭ್ರಮ. ನನ್ನ ಕೆಲಸದ ಮೇರೆಗೆ ಚಿಕ್ಕಮಗಳೂರಿಗೆ ಬಂದಿದ್ದೆ. ಈಗ ಬಸ್ಸಿನಲ್ಲಿ ಕೂತು ಮತ್ತೆ ಬೆಂಗಳೂರಿಗೆ ಹೊರಟಿದ್ದೇನೆ. ಪ್ರಯಾಣ ಸುಖಕರವಾಗಿದೆ, ಮನಸ್ಸು ಶಾಂತವಾಗಿದೆ. ಚಕ್ಕಮಗಳೂರಿನ ನೈಸರ್ಗಿಕ ಸೌಂದರ್ಯ ಹಬ್ಬಕ್ಕೆ ಇನ್ನೂ ಮೆರೆಗು ನೀಡಿದೆ.
ಇಷ್ಟು ಸಂತಸದಲ್ಲಿರುವ ಮನಸ್ಸು ತನ್ನ ಭಾವನೆಗಳನ್ನು, ಸಂತೋಷವನ್ನು ಹೊರಹಾಕಬೇಕೆಂದು ಪ್ರಯತ್ನಿಸುತ್ತಿದೆ. ಈ ಪ್ರಯತ್ನಕ್ಕೆ ನನ್ನ ಬುದ್ಧಿಯು ತನ್ನದೊಂದು ಕಾಣಿಕೆಯಾಗಿ, ಭಾಷೆ, ಲಿಪಿ ಇಲ್ಲದ ಭಾವನೆಗಳನ್ನು ಅರ್ಥವಾಗುವ ಭಾಷೆಯಲ್ಲಿ ಅನುವಾದಿಸಲು ಹೊರಟಿದೆ. ಈ ಬುದ್ಧಿಯದು ಇದು ಮೊತ್ತ ಮೊದಲ ಪ್ರಯತ್ನ.
ಆದರೆ, ಈ ಬುದ್ಧಿಯು ತನಗೆ ಐದು ಬೇರೆ ಬೇರೆ ಭಾಷೆಗಳು ತಿಳಿದಿದ್ದಾದರೂ, ಆ ಭಾವನೆಗಳನ್ನು ಅರ್ಥೈಸಲಾಗದೆ, ಅನುವಾದಿಸಲಾಗದೇ, ತೊಳಲಾಡುತ್ತಿದೆ. ಯಾವ ಮನಸನ್ನೂ ಅರ್ಥೈಸುವ ಯಾವ ಮೆದುಳೂ ಇನ್ನೂ ಹುಟ್ಟಿಲ್ಲ ಎಂದು ಕಾಣುತ್ತೆ......
ನನ್ನ ಅನಿಸಿಕೆಯ ಮಟ್ಟಕ್ಕೆ ಘಟಾನುಘಟಿ ಕವಿಗಳು, ಕವಯಿತ್ರಿಗಳೂ ಈ ಕಾರ್ಯದಲ್ಲಿ ಸೋತಿದ್ದಾರೆ. ಬಹುಷಃ ಈ ಕಾರಣದಿಂದಲೇ ಅವರು ನಿರಂತರವಾಗಿ ಅವರವರ ಭಾವನೆಗಳನ್ನು ಅನುವಾದಿಸುವ ಪ್ರಯತ್ನದಲ್ಲಿ ಅದ್ಭುತಗಳನ್ನು ಸೃಷ್ಟಿಸಿರುವುದು. ಈ ಪ್ರಯತ್ನವೇ ಅವರ ಬರಹಗಳಿಗೆ ಸ್ಫೂರ್ತಿ, ಇಂಧನ...
ಇದೇ ಯೋಚನೆಯ ಗುಂಗಿನಲ್ಲಿ, ನಾನು ನಿದ್ದೆಗೆ ಜಾರಿದ್ದೆ ಎಂದು ತಿಳಿದ ನನ್ನ ಪೆನ್ನು, ನನ್ನ ಕೈಯ್ಯಿಂದ ಜಾರಿತ್ತು...